
ಸಕಲೇಶಪುರ – ಪಟ್ಟಣದ ಹೃದಯ ಭಾಗದಲ್ಲಿ SBI ಬ್ಯಾಂಕ್ ಸಮೀಪ ನಿರ್ಮಾಣವಾಗುತ್ತಿರುವ ಫುಡ್ ಕೋರ್ಟ್ ಸಾರ್ವಜನಿಕ ಹಿತಾಸಕ್ತಿಯಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಕಾಮಗಾರಿಯನ್ನು ಕೂಡಲೇ ಸ್ಥಗಿತಗೊಳಿಸುವಂತೆ ಮಾಜಿ ಶಾಸಕ ಹೆಚ್. ಎಂ. ವಿಶ್ವನಾಥ್ ಅವರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಈ ಸ್ಥಳದಲ್ಲಿ ಸಂಚಾರ ದಟ್ಟಣೆ ಹೆಚ್ಚು ಇರುವುದರಿಂದ ಹಾಗೂ ಎಲ್ಲಾ ಬ್ಯಾಂಕ್ ಗಳು ಮತ್ತು ಎಲ್ಲಾ ಸರ್ಕಾರಿ ಕಚೇರಿಗಳು ಹೆಚ್ಚಾಗಿದ್ದು, ಈಗಾಗಲೇ ವಾಹನ ನಿಲುಗಡೆಗೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದರು. ಇಂತಹ ಜನನಿಬಿಡ ಪ್ರದೇಶದಲ್ಲಿ ಯಾವುದೇ ವೈಜ್ಞಾನಿಕ ಅಧ್ಯಯನ ಇಲ್ಲದೆ ಫುಡ್ ಕೋರ್ಟ್ ನಿರ್ಮಾಣ ಮಾಡುತ್ತಿರುವುದು ಸಮಂಜಸವಲ್ಲ ಎಂದು ಕಿಡಿಕಾರಿದರು. ಈ ಕಾಮಗಾರಿಯಿಂದ ತೀವ್ರ ಸಂಚಾರ ಸಮಸ್ಯೆ ಮತ್ತು ಅಪಘಾತಗಳ ಸಾಧ್ಯತೆ ಇದೆ ಎಂದರು. ಈ ಬಗ್ಗೆ ಸಾರ್ವಜನಿಕರು ಹಾಗೂ ಮಾಧ್ಯಮಗಳು ಆಕ್ಷೇಪ ವ್ಯಕ್ತಪಡಿಸಿದ್ದರೂ ಆಡಳಿತ ವರ್ಗವು ಇದನ್ನು ಪ್ರತಿಷ್ಠೆಯ ಪ್ರಶ್ನೆಯಾಗಿ ಕಾಮಗಾರಿ ಮುಂದುವರಿಸುತ್ತಾ ಇರುವುದು ಸರಿಯಲ್ಲ ಎಂದು ಅವರು ಟೀಕಿಸಿದ್ದಾರೆ. ಈ ಹಿಂದೆ ಪಟ್ಟಣದ ಸುಗಮ ಸಂಚಾರಕ್ಕೆ ಪಾದಚಾರಿ ಮಾರ್ಗಗಳ ಮೇಲಿನ ಅತಿಕ್ರಮಣ ಮತ್ತು ಗೂಡಾಂಗಡಿಗಳನ್ನು ತೆರವುಗೊಳಿಸಿರುವ ಆಡಳಿತದ ನೀತಿಯನ್ನು ಶ್ಲಾಘಿಸಿರುವ ಅವರು ಒಂದೆಡೆ ಅತಿಕ್ರಮಣ ತೆರವುಗೊಳಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡುವುದು ಇನ್ನೊಂದೆಡೆ ಅದೇ ಜಾಗದಲ್ಲಿ ಜನಸಂದಣಿ ಹೆಚ್ಚಿಸುವ ಫುಡ್ ಕೋರ್ಟ್ ನಿರ್ಮಿಸುವುದು ಆಡಳಿತದ ದ್ವಂದ್ವ ನೀತಿಗೆ ಸಾಕ್ಷಿ ಎಂದು ಆರೋಪಿಸಿದ್ದಾರೆ. ಶುಕ್ರವಾರದಿಂದ ಭಾನುವಾರದ ವರೆಗೆ ಸಕಲೇಶಪುರಕ್ಕೆ ಬಾರಿ ಜನಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುವುದರಿಂದ ಈ ರಸ್ತೆಯಲ್ಲಿ ಜನದಟ್ಟಣೆ ಅತೀವವಾಗಿರುತ್ತದೆ ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಜಿಲ್ಲಾಧಿಕಾರಿಗಳು ತಕ್ಷಣ ಮಧ್ಯೆ ಪ್ರವೇಶಿಸಿ ತಮ್ಮ ವಿಶೇಷ ಅಧಿಕಾರ ಬಳಸಿ ಈ ಯೋಜನೆಯನ್ನು ತಡೆಹಿಡಿಯಬೇಕು ಮತ್ತು ಸಾರ್ವಜನಿಕರಿಗೆ ತೊಂದರೆಯಾಗದಂತೆ ಬೇರೆ ಸೂಕ್ತ ಸ್ಥಳದಲ್ಲಿ ಫುಡ್ ಕೋರ್ಟ್ ನಿರ್ಮಾಣದ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ಹೆಚ್.ಎಂ. ವಿಶ್ವನಾಥ್ ಆಗ್ರಹಿಸಿದ್ದಾರೆ.
