










ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾನಿಲಯದ ಗೌತಮ ಹಾಗೂ ಬಾಬಾಸಾಹೇಬ್ ಅಂಬೇಡ್ಕರ್ ವಿದ್ಯಾರ್ಥಿ ನಿಲಯಗಳಿಗೆ ಭೇಟಿ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಲಾಯಿತು. 50 ವರ್ಷಕ್ಕೂ ಹಳೆಯದಾದ ಗೌತಮ ವಿದ್ಯಾರ್ಥಿ ನಿಲಯ ಹಾಗೂ 25 ವರ್ಷಕ್ಕೂ ಹಳೆಯದಾದ ಅಂಬೇಡ್ಕರ್ ವಿದ್ಯಾರ್ಥಿ ನಿಲಯ ಎರಡು ಸಹ ದುರಸ್ತಿ, ಸ್ವಚ್ಛತೆ ಹಾಗೂ ಪೈಂಟ್ ಭಾಗ್ಯ ಕಾಣದೆ ಅತ್ಯಂತ ಅನಾರೋಗ್ಯಕರ ವಾತಾವರಣದಿಂದ ಕೂಡಿವೆ. ಶೌಚಾಲಯ ಮತ್ತು ಸ್ನಾನ ಗೃಹಗಳ ಪರಿಸ್ಥಿತಿಯಂತೂ ಬಸ್ ನಿಲ್ದಾಣಗಳಲ್ಲಿರುವ ಶೌಚಾಲಯಗಳ ಸ್ಥಿತಿಗಿಂತಲೂ ಹೀನಾಯವಾಗಿವೆ. ಇನ್ನು ಕೊಠಡಿಗಳಲ್ಲಿ ಕಿಟಕಿ ಬಾಗಿಲುಗಳು ದುಸ್ಥಿತಿಯಲ್ಲಿದ್ದು, ವಿದ್ಯಾರ್ಥಿಗಳಿಗೆ ಒದಗಿಸಿರುವ ಮಂಚ ಹಾಗೂ ಚೇರ್ ಗಳು ಸಂಪೂರ್ಣವಾಗಿ ಹಾಳಾಗಿವೆ. ಫ್ಯಾನ್ ಗಳು ಬಹುತೇಕ ಕೆಟ್ಟಿವೆ. ಶುದ್ಧ ನೀರಿನ ಘಟಕ , ನೀರಿನ ಟ್ಯಾಂಕ್ ಬಹುತೇಕ ಹಾಳಾಗಿವೆ. ಬಹುತೇಕ ವಿದ್ಯಾರ್ಥಿಗಳು ಚಾಪೆ ಹಾಸಿಕೊಂಡು ಮಲಗುತ್ತಾರೆ. ರಾತ್ರಿ ವೇಳೆ ವಿದ್ಯಾರ್ಥಿ ನಿಲಯಗಳಿಗೆ ಹೋಗುವ ದಾರಿಯಲ್ಲಂತೂ ಯಾವುದೇ ವಿದ್ಯುತ್ ದೀಪಗಳಾಗಲಿ , ಸೋಲಾರ್ ದೀಪಗಳ ವ್ಯವಸ್ಥೆಗಳಾಗಲಿ ಇಲ್ಲದೆ ಕಾಡಿನೊಳಗೆ ಪ್ರವೇಶ ಮಾಡಿದಂತಾಗುತ್ತದೆ. ಇದರಿಂದಾಗಿ ಈ ವಿದ್ಯಾರ್ಥಿ ನಿಲಯಗಳಲ್ಲಿ ಶೈಕ್ಷಣಿಕ ವಾತಾವರಣವೇ ಸಂಪೂರ್ಣವಾಗಿ ಹಾಳಾಗಿದೆ. ಇಲ್ಲಿನ ವ್ಯವಸ್ಥೆಗಿಂತ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯಗಳಲ್ಲಿ ಇರುವ ಸೌಲಭ್ಯಗಳು ಮೇಲು ಎನಿಸುತ್ತದೆ. ವಿಶ್ವವಿದ್ಯಾನಿಲಯದ ಆಡಳಿತ ಮಂಡಳಿ ಈ ವಿಚಾರದಲ್ಲಿ ಅತ್ಯಂತ ದಿವ್ಯ ನಿರ್ಲಕ್ಷ್ಯ ವಹಿಸಿದೆ. ಮೈಸೂರು ಚಾಮರಾಜನಗರ ಮಂಡ್ಯ ಹಾಸನ ಚಿಕ್ಕಮಂಗಳೂರು ಜಿಲ್ಲೆಗಳ ಲಕ್ಷಾಂತರ ವಿದ್ಯಾರ್ಥಿಗಳ ಪದವಿ ಶಿಕ್ಷಣಕ್ಕೆ ಆಧಾರವಾಗಿದ್ದ ಈ ಹಾಸ್ಟೆಲ್ ಗಳು ಇಂತಹ ನಿರ್ಲಕ್ಷಕ್ಕೆ ಒಳಗಾಗಿರುವುದು ಅತ್ಯಂತ ಖಂಡನೀಯ. ಸರ್ಕಾರ ಮತ್ತು ವಿಶ್ವವಿದ್ಯಾನಿಲಯ ಈ ಬಗ್ಗೆ ತುರ್ತು ಕ್ರಮ ಕೈಗೊಳ್ಳದಿದ್ದರೆ ವಿದ್ಯಾರ್ಥಿಗಳ ಪರವಾಗಿ ಬಹುಜನ ಸಮಾಜ ಪಕ್ಷ ಹೋರಾಟವನ್ನು ಹಮ್ಮಿಕೊಳ್ಳಬೇಕಾಗುತ್ತದೆ.
ಎಂ. ಕೃಷ್ಣಮೂರ್ತಿ ರಾಜ್ಯಾಧ್ಯಕ್ಷರು ಬಹುಜನ ಸಮಾಜ ಪಾರ್ಟಿ ಕರ್ನಾಟಕ
